ಬೀದಿನಾಟಕ

ಸಣ್ಣ ಬುದ್ಧಿ. ಯಾರಾದರೂ ಏನಾದರು ಮಾಡಿದರೇ ಅದು ನಾನು ಯಾಕೆ ಮಾಡಲಿಲ್ಲ ಅಂತ. ಅದನ್ನು ಸಾಧಿಸಲೇ ಬೇಕು ಅಂತ ದಾರಿ ಕಾಯೋದೋ, ಇಲ್ಲಾ ಹುಡುಕಾಡುತ್ತಾ ಸಾಗಿಯೇ ಬಿಡುವುದು. ಈ ಬ್ಲಾಗ್, ಬರಹನೂ ಹಾಗೇ. ಅಂದು ನಾನು ಇನ್ನೂ ಆರನೇಯತ್ತು. ನಮ್ಮ ಮನೆಯ ಹತ್ತಿರವಿದ್ದ ಈ ಹುಡುಗರು ನಮ್ಮ ಶಾಲೆಗೆ ಯಾಕೆ ಬಂದರೂ ಅಂತ ನೋಡುತ್ತಾ ನಿಂತಿದ್ದೆ. ಅದರಲ್ಲಿ ನನ್ನ ಚಿಕ್ಕಪ್ಪನನ್ನು ಕಂಡೇ ಆದರೆ ಆ ಗದ್ದಲದಲ್ಲಿ ನನಗೆ ಅವರನ್ನು ಮುಟ್ಟಲಿಕ್ಕೂ ಆಗುತ್ತಿರಲಿಲ್ಲ. ಕಾರಣ ನಮ್ಮ ಶಾಲೆಯ ಮಕ್ಕಳ ಸಂಖ್ಯೆ ಆರುನೂರಕ್ಕೂ ಮಿಕ್ಕಿ ಇತ್ತು. ಶಾಲೆಯ ಕಾಂಪೋಂಡಿನಲ್ಲಿ ದೊಡ್ಡ ಸರ್ಕಲ್ ಮಾಡಿ, ಕಂಜರ್ ಹಾಗೂ ಹಲಿಗೆ ಬಾರಿಸುತ್ತಾ ನಿಂತಾಗ ಕಟ್ಟೆಅಯ ಮೇಲಿದ್ದ ನಮಗೆ ಒಂದು ಸಣ್ಣ ಹುಡುಗಿ, ನಮ್ಮ ವಯಸ್ಸಿನ ಹಲವಾರು ಹುಡುಗರು ಕಂಡರು. ಅದರಲ್ಲಿ ನನ್ನೊಂದಿಗೆ ಆಡುತ್ತಿದ್ದ ನನಗಿಂತ ಹಿರಿಯರು ಇದ್ದರು. ನನಗೆ ಆಶ್ಚರ್ಯ. ಇವರೇನೂ ಮಾಡುತ್ತಾರೆ ಇಲ್ಲಿ ಎಂದು. ನಮ್ಮ ಶಾಲೆಯ ಶಿಕ್ಷಕರು ಅವರನ್ನು ಪರಿಚಯಿಸುತ್ತಾ, ಸಾಕ್ಷರತೆಯ ಕುರಿತು, ಪರಿಸರದ ಕುರಿತು ಬೀದಿನಾಟಕವಾಡಲು ಬಂದಿರುವುದಾಗಿ ತಿಳಿಸಿದರು. ನನಗೆ ನನ್ನಷ್ಟಿರುವ ಇವರೆಲ್ಲ ಏನು ಮಾಡುತ್ತಾರೆ ಎಂದು ಆಲೋಚಿಸಿದೆ. ನನಗೆ ಶಾಲೆಯ ಯಾವ ಕಾರ್ಯಕ್ರಮದಲ್ಲೂ ಕರೆದುಕೊಳ್ಳುತ್ತಿರಲಿಲ್ಲ. ತರಗತಿಯಲ್ಲಿ ಹೆಚ್ಚು ಅಂಕಗಳಿಸುವ, ಸ್ವಲ್ಪ ಜೋರಾಗಿರುವ ಹುಡುಗ- ಹುಡುಗಿಯರೇ ಎಲ್ಲ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿರುವುದು ಕಾಣಿಸುತ್ತಿತ್ತು. ನಮ್ಮಂಥ ಮಂದಗತಿಯವನು ಎಲ್ಲಿಗೂ ಆಗದವನಾಗಿದ್ದೆ.

ಉಚಿತ ನೋಟ್ ಪುಸ್ತಕ ವಿತರಣೆ

ಗೋನಾಳ ರಾಜಶೇಖರ ಗೌಡ ಚಾರಿಟಬಲ್ ಟ್ರಸ್ಟ್ ವತಿಯಿಂದ ಕುಷ್ಟಗಿ ತಾಲೂಕ್ ನಾದ್ಯ೦ತ ಪ್ರೌಡ ಶಾಲೆ ಪ್ರತಿ  ವಿದ್ಯಾರ್ಥಿಗಳಿಗೆ ನಾಲ್ಕು ಉಚಿತ ನೋಟ್ ಪುಸ್ತಕಗಳನ್ನು ನೀಡಲಾಯಿತು. ಸಮಾಜ ಸೇವಕರಾದ  ಗೋನಾಳ ರಾಜಶೇಖರ ಗೌಡ ಅವರಿಗೆ ಹಾಗೂ ಅವರ ತಂಡದವರಿಗೆ ಹೃತ್ಪೂರ್ವಕ ಧನ್ಯಾವಾದಗಳು.

Image

ರಂಗಭೂಮಿ

ಘಟಾನುಘಟಿಗಳಲ್ಲಿ ಒಬ್ಬರು….
ಈ ದಿನ ವಿಶ್ವರಂಗಭೂಮಿ ದಿನ. ಧ್ಯಾನಕ್ಕೆ ಸಿಗುವ ಒಂದಷ್ಟು ವ್ಯಕ್ತಿತ್ವಗಳ ಮಾದರಿಯನ್ನು ಅನುಸರಿಸಿ ರಂಗಕಾಯಕ ಮಾಡುವ ಹೊತ್ತಲ್ಲಿ – ಬಸು, ಅಕ್ಷರ, ಪ್ರಸನ್ನ, ಇಕ್ಬಾಲ್ ಅಹ್ಮದ್, ರಘುನಂದನ, ಪ್ರಕಾಶ ಗರೂಡ, ಜಂಬೆ- ಎಲ್ಲ ನೆನಪಾಗುತ್ತಾರೆ. ಅವರೊಂದಿಗೆ ಕಳೆದ ಕ್ಷಣಗಳು ನೆನಪಾಗುತ್ತವೆ. ಬೆನ್ನು ತಟ್ಟಿ ಪ್ರೋತ್ಸಾಹಿಸಿದ, ತಪ್ಪಿದಲ್ಲಿ ಕಾಲೆಳೆದು ಕಿಚಾಯಿಸಿದ ಅಲ್ಲದೆ ಹೊಸ ಓದು,ಹೊಸ ನೋಟದ ಹೊಸ ಕಾಣ್ಕೆಗಳನ್ನು ಹಾಕಿಕೊಟ್ಟು ಹೊಸದಾಗಿ ರಂಗಭೂಮಿಗೆ ಬರುತ್ತಿರುವ ಯುವ ಮಿತ್ರರೊಂದಿಗೆ ಇಂದಿಗೂ ಅದೇ ಉತ್ಸಾಹದಲ್ಲಿ ಕೆಲಸ ಮಾಡುವ ಅವರ ಬದ್ಧತೆ ಕೊಂಚ ಧೈರ್ಯ ಕೊಡುತ್ತದೆ. ಯಾವದೋ ಕ್ಷಣದಲ್ಲಿ ಸಾಕಪ್ಪ ಈ ರಂಗಭೂಮಿ ಸಹವಾಸ ಅಂದುಕೊಳ್ಳುವಾಗ ರಂಗಭೂಮಿಯನ್ನೇ ಉಸಿರಾಗಿಸಿಕೊಂಡವರು ಥಟ್ಟನೆ ನೆನಪಾಗುತ್ತಾರೆ….. ಇವತ್ತು ಈಗ ನೆನಪಾದವರು ಚಿದಂಬರರಾವ್ ಜಂಬೆ…. ಮೂವತ್ತು ವರ್ಷಗಳ ಕಾಲ ರಂಗಶಿಕ್ಷಣ ನೀಡಿದ, ಕನ್ನಡ ರಂಗಭೂಮಿಯಲ್ಲಿ ಬಹಳಷ್ಟು ನಟ-ನಟಿಯರಿಗೆ, ನಿರ್ದೇಶಕರುಗಳಿಗೆ, ರಂಗತಂತ್ರಜ್ಞರುಗಳಿಗೆ ಪಾಠ ಮಾಡಿದ, ರಂಗದೀಕ್ಷೆ ನೀಡಿದ ಮಹಾನ್ ವ್ಯಕ್ತಿತ್ವ ಶ್ರೀ ಚಿದಂಬರರಾವ್ ಜಂಬೆ ಅವರದ್ದು. ಆಧುನಿಕ ಕನ್ನಡ ರಂಗಭೂಮಿಯಲ್ಲಿ ನಾಟಕ ಕಲಿಸುವ, ಕಲಿಯುವ, ನೋಡುವ ಪರಂಪರೆಯನ್ನು ಬೆಳೆಸಿದ ಕೆಲವೇ ನಿರ್ದೇಶಕರುಗಳಲ್ಲಿ ಜಂಬೆ ಅವರ ವ್ಯಕ್ತಿತ್ವ ಗುರುವಿನ ಸ್ಥಾನದ್ದು. ಅವರು ನನಗೆ ಗುರುಗಳಲ್ಲ ಆದರೂ ಅವರ ನಿರ್ದೇಶನದ ನಾಟಕಗಳಿಂದ ನಾನು ಕಲಿತಿದ್ದೇನೆ, ಅವರ ಒಡನಾಟದಿಂದ ನಾಟಕ ಕಟ್ಟುವ, ಸಾಹಿತ್ಯ ಕೃತಿಯೊಳಗಿನ ನಾಟಕೀಯ ಭಾವಗಳನ್ನು ಅರ್ಥೈಸಿಕೊಳ್ಳುವ, ಅಲ್ಲದ್ದನ್ನೂ ನಾಜೂಕಾಗಿ ಕ್ರಿಯಾಶೀಲಗೊಳಿಸುವ, ನವಶಾಸ್ತ್ರೀಯ ಕಲಾ ಮಾರ್ಗಗಳನ್ನು ಆಧುನಿಕವಾಗಿ ಒಳಗೊಳ್ಳುವ…. ಹೀಗೆ ಅವರಿಂದ ಏನೆಲ್ಲ ಕಲಿತಿದ್ದೇನೆ.
ಆ ವ್ಯಕ್ತಿತ್ವ ಅಖಾಡಾದ ಮುಂದೆ ಕುರ್ಚಿ ಹಾಕಿಕೊಂಡು ಕೂತಿದ್ದರೆ ಸಾಕು ನಾಟಕದ ತಾಲೀಮಿಗೊಂದು ತೂಕ ತನ್ನತಾನೇ ಬಂದುಬಿಡುತ್ತದೆ. ಇದು ಉತ್ಪ್ರೇಕ್ಷೆ ಮಾತಲ್ಲ ಅವರನ್ನು ಹತ್ತಿರದಿಂದ ಬಲ್ಲ ಎಲ್ಲರೂ ಒಪ್ಪಿಕೊಳ್ಳುತ್ತಾರೆ. ನಾಟಕ ಹೀಗೇ ಮಾಡಬೇಕೆಂದು, ಅಭಿನಯ ಅಂದರೆ ಇದು ಎಂದು ತಮಗೆ ತಿಳಿದ ಸತ್ಯವನ್ನು ಬಲವಂತವಾಗಿ ನಟರ ಮೇಲೆ ಹೇರುವ ಅದೆಷ್ಟೋ ನಿರ್ದೇಶಕರ ಬಗ್ಗೆ ನಟ-ನಟಿಯರು ಮಾತಾಡಿಕೊಳ್ಳುವುದನ್ನು ಕೇಳಿದ್ದಿದೆ. ಆದರೆ ಕಲಿಸುವ ಸೂಕ್ಷ್ಮತೆಯನ್ನು ಉಳಿಸಿಕೊಂಡು ನಟರ ಅಂತಃಸ್ಪೂರ್ತಿಗೆ ಇಂಬು ಕೊಡುವ ದೃಷ್ಟಿಯುಳ್ಳ ಕೆಲವು ನಿರ್ದೇಶಕರಲ್ಲಿ ಶ್ರಿ ಚಿದಂಬರರಾವ್ ಜಂಬೆ ಅವರು ಒಬ್ಬರು. ಸೌಂದರ್ಯ ಪ್ರಜ್ಞೆ ಮತ್ತು ನಟರ ಭಾವಪ್ರಪಂಚ ಎರಡು ಒಟ್ಟೊಟ್ಟಿಗೆ ಅವರ ನಾಟಕಗಳಲ್ಲಿ ಕಾಣುತ್ತದೆ. ಯಾವ ನಾಟಕವೇ ಆಗಲಿ ರಂಗಕೃತಿಯ ಸಂಕಲನದಲ್ಲಿಯೇ ಅವರು ಗೆದ್ದು ಬಿಟ್ಟಿರುತ್ತಾರೆ. ರಂಗಸಾಧ್ಯತೆಯನ್ನು ಕಲಾತ್ಮಕವಾಗಿ ಆಗು ಮಾಡುವ ಆ ವಿಧಾನದಲ್ಲಿ ಸಹನೆ ಮತ್ತು ನಾಟಕದ ಒಟ್ಟು ವಿನ್ಯಾಸವನ್ನು ಜತನದಲ್ಲಿಟ್ಟುಕೊಂಡು ಕೃತಿಯ ಆಶಯವನ್ನು ವಿಸ್ತಾರವಾಗಿ ಪದರು ಪದರು ಬಿಡಿಸಿಡುವ ಕ್ರಮ ಅವರ ಶಿಸ್ತಿನೊಂದಿಗೆ ನಾಟಕಕ್ಕೂ ಬಂದು ಬಿಡುತ್ತದೆ. ತಾಲೀಮು ಹಂತದಲ್ಲಿ ನಟರೊಂದಿಗೆ ಒಡನಾಡುವುದು, ನೇಪಥ್ಯವನ್ನು ಜೀವಂತ ಪಾತ್ರವೆಂದು ಕಾಣುವುದು, ಹಲವಾರು ತಂತ್ರಜ್ಞರನ್ನೂ ಕೂಡಿಸಿಕೊಂಡು ಒಂದು ಮಾದರಿಯ ಕುಸುರಿ ಕೆಲಸವನ್ನು ನಾಟಕದಲ್ಲಿ ಪಾಕಗೊಳಿಸುವ ಅವರ ರಂಗಭೂಮಿ ಪ್ರೀತಿ ಎಂಥವರನ್ನು ಉತ್ಸಾಹಿತರನ್ನಾಗಿಸುತ್ತದೆ. ಸಂಘಟಿಸುವ ಚಾತುರ್ಯದಿಂದ ದೂರ ಉಳಿದು ಎಲ್ಲವನ್ನೂ ನಾನೇ ಮಾಡುತ್ತೇನೆಂದು ಹೊರಡುವ ಈ ದಿನಮಾನದಲ್ಲಿ ಹೀಗೆ ರಂಗಬಳಗವನ್ನು ನಾಟಕದ ನೆಪದಲ್ಲಿ ಒಟ್ಟಾಗಿಸುತ್ತಿರುವುದು ಮತ್ತು ಯುವ ರಂಗಕರ್ಮಿಗಳಿಗೆ ಆದ್ಯತೆ ನಿಡುತ್ತಿರುವುದು ನಿಜಕ್ಕೂ ಸಂತೋಷದ ಸಂಗತಿ. ಕನ್ನಡದ ಎರಡು ಪ್ರಸಿದ್ಧ ರಂಗಶಾಲೆಗಳಲ್ಲಿ ಆಚಾರ್ಯ ಪುರುಷರಾಗಿ ಕೆಲಸ ಮಾಡಿ, ರಂಗಾಯಣದ ನಿರ್ದೇಶಕರಾಗಿ, ರಾಷ್ಟ್ರೀಯ ನಾಟಕ ಶಾಲೆಯ ಬೆಂಗಳೂರು ಚಾಪ್ಟರ್ ತೆರೆದು ಶಿಬಿರಗಳನ್ನು ನಡೆಸಿಯೂ ಎಳೆಮಗುವಿನಂತೆ ಹೊಸ ಹುಡುಗರೊಂದಿಗೆ ಕೈ ಜೋಡಿಸಿ ಸಂಘಟನೆ ಕಟ್ಟುವ ಉತ್ಸಾಹದಲ್ಲಿರುವ ಅವರ ಬದ್ಧತೆ ನಮಗೆ ಮಾದರಿಯಾಗಿದೆ

ಇಂಗ್ಲಿಷ್ ಮಾಧ್ಯಮ

ನಾನು ವಾಸಿಸುವ ಹಳ್ಳಿಯಲ್ಲಿ ಇಂಗ್ಲಿಷ ಶಿಕ್ಷಣಕ್ಕಾಗಿ ಹಾತೊರೆಯುವ ಮಕ್ಕಳದ್ದೊಂದು ಪಡಿಪಾಟಲು ಕೇಳುವವರಿಲ್ಲ. ಇಲ್ಲಿ ಸೇರಲು ಬಂದಿರುವ ವಿದ್ಯಾರ್ಥಿಗಳೆಲ್ಲ ರೈತಕುಟುಂಬದಿಂದ ಬಂದವರು. ಅವರೆಲ್ಲ ಈ ಮಠದ ಇಂಗ್ಲಿಷ ಮಾಧ್ಯಮದ ಶಾಲೆಯನ್ನ ಸೇರಲೇಬೇಕೆಂದು ದೂರದ ಊರುಗಳಿಂದ ಬಂದವರು. ಅವರ ಕೈಯೊಳಗಿನ ಟ್ರಂಕು-ಹಾಸಿಗೆ ಸುರುಳಿ ನೋಡುತ್ತಿದ್ದ ಹಾಗೆ ಊಹಿಸಬಹುದಾದ್ದು ಅಂದ್ರೆ ಅವರೆಲ್ಲ ಹಳ್ಳಿ ಮಕ್ಕಳೇ ಸೈ. ಹಾಗೆ ಅವರನ್ನು ಕರೆದು ಮಾತಾಡಿಸಿದಾಗ ತಿಳಿದದ್ದು ಅವರು ಇಂಗ್ಲಿಷ ಮಾಧ್ಯಮವನ್ನು ಆಯ್ದುಕೊಂಡ ಕಾರಣಕ್ಕಾಗಿಯೇ ಇಷ್ಟು ದೂರ ಬಂದವರು. ಕನ್ನಡ ಮಾಧ್ಯಮದ ಮಾಧ್ಯಮಿಕ ಶಾಲೆಯಲ್ಲಿ ಸೀಟುಗಳು ಇನ್ನೂ ಪೂರ್ಣ ಭರ್ತಿಯಾಗಿಲ್ಲವಾದರೂ ಇಂಗ್ಲಿಷ್ ಮಾಧ್ಯಮದ ಮಾಧ್ಯಮಿಕ ಶಾಲೆಯಲ್ಲಿ ಮಿತಿಮೀರಿ ಪ್ರವೇಶಗಳು ಆಗಿವೆ. ದುರಂತವೆಂದರೆ ಕಳೆದ ಸಾಲಿನಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಓದಿದ್ದ ಕೆಲವು ವಿದ್ಯಾರ್ಥಿಗಳಿಗೆ ತಡವಾಗಿ ಸೇರಲು ಬಂದ ಕಾರಣಕ್ಕಾಗಿ ಪ್ರವೇಶ ಸಿಕ್ಕದಾಗಿದೆ. ಹಾಗೆ ತಡವಾಗಿ ಪ್ರವೇಶ ಬಯಸಿ ಬಂದ ಸಾಣೇಹಳ್ಳಿಯ ಪಕ್ಕದ ಊರಿನ ಪೂಜಾ ಎಂಬ ಹುಡುಗಿ ಇಂಗ್ಲಿಷ್ ಮಾಧ್ಯಮದಲ್ಲಿ ಪ್ರವೇಶ ಸಿಗಲಿಲ್ಲವೆಂಬ ಕಾರಣಕ್ಕಾಗಿಯೇ ದಿನಾಂಕ 09/ಜೂನ್/2012 ರಂದು ವಿಷಕುಡಿದು ಆತ್ಮಹತ್ಯ ಮಾಡಿಕೊಂಡಿದ್ದಾಳೆ. ಆ ಮಗಳ ತಂದೆ ಆ ರೈತ ಯಾವ ಕೆಲಸದ ಅವಸರಕ್ಕಾಗಿ ಅವನು ತಡವಾಗಿ ಬಂದನೋ ಅದನ್ನು ಶಪಿಸುತ್ತಿದ್ದಾನೆ. ಈ ಹಳ್ಳಿಮಕ್ಕಳ ಇಂಗ್ಲಿಷ್ ವ್ಯಾಮೋಹ-ಕನ್ನಡ ಪ್ರೀತಿಯನ್ನ ಕಂಡಾಗ ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮದ ಅವಶ್ಯಕತೆಯನ್ನು ಕುರಿತಾಗಿ ಗಹನವಾಗಿಯೇ ಆಲೋಚಿಸಬೇಕಾಗಿದೆ.
ಹುಲಿ ಸಿಂಹ ಶಾರ್ದೂಲಗಳ ಜೊತೆಗೆ ಹುಲ್ಲೆ ಹಸು ಕುರಿಗಳು ಒಡನಾಡಿಕೊಂಡು ಬದುಕುವ ಮಾರ್ಗವೊಂದು ತೆರೆದುಕೊಂಡದ್ದು ಈ ಇಂಗ್ಲಿಷ್ ಎಂಬ ಮಾಯಾವಿ ಭಾಷೆಯಿಂದ ಎಂಬುದನ್ನು ಅರ್ಥಮಾಡಿಕೊಳ್ಳುವುದಾದರೆ ಸಮಾನ ಶಿಕ್ಷಣ ಸಾಧ್ಯವಾಗುತ್ತದೆ. ಆದರೆ ಈ ಬುದ್ಧಿವಂತ ವರ್ಗ ಹೋರಾಟದ ಕೆಚ್ಚೆದೆಯ ಬೀಸು ದೊಣ್ಣೆಯ ತುಂಬು ಅಭಿಮಾನದ ಗುಟುರು ಹಾಕುತ್ತಲಿದೆ. ಅದು ಯಾರ ವಿರುದ್ಧ – ಶೂದ್ರಾತಿಶೂದ್ರ ಬಡವರ, ಹಳ್ಳಿಗರ, ರೈತರ ಮಕ್ಕಳ ವಿರುದ್ಧ. ಭಾಷೆಯೂ ಕೀಳರಿಮೆಯನ್ನು ಸೃಷ್ಟಿಸುತ್ತದೆ ಥೈಯ್ಯಾ ಥಕ್ಕ ಅಂತ ಕುಣಿಸಿಬಿಡುತ್ತದೆ. ಕನ್ನಡದಲ್ಲಿ ಯೋಚಿಸುವವನು ಅಂಗ್ರೇಜಿಯಲ್ಲಿ ವಿವರಿಸಬಲ್ಲವನಾಗಿರುತ್ತಾನೆ. ಅಂಥವನು ಎಲ್ಲ ದೇಶಗಳ ಎಲ್ಲ ಕಂಪನಿಗಳಲ್ಲೂ ಕೆಲಸ ಮಾಡಬಲ್ಲವನಾಗಿರುತ್ತಾನೆ. ಅವನಿಗೆ ಸಿಗುವ ಪ್ರಾಧಾನ್ಯತೆಯನ್ನು ಕನ್ನಡದಲ್ಲಿ ಯೋಚಿಸಿ ಕನ್ನಡದಲ್ಲೇ ವ್ಯವಹರಿಸಬಲ್ಲಾತನು ಪಡೆಯಲಾರ…. ಇದನ್ನು ಅರ್ಥವತ್ತಾಗಿ ವಿವರಿಸುವ ಅಗತ್ಯವಿಲ್ಲ. ಯಾಕಂದ್ರೆ ಎರಡು ಮೂರು ವರ್ಗಗಳು ಗೆರೆ ಕೊರೆದುಕೊಂಡೇ ಹುಟ್ಟಿಕೊಳ್ಳುತ್ತಿರುವ ಈ ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಇಂಗ್ಲಿಷ್ ಮಾಧ್ಯಮಕ್ಕೆ ಸಿಗುವ ಮಾನ್ಯತೆ ಕನ್ನಡಕ್ಕೆ ಸಿಕ್ಕಿಲ್ಲ.
ಆದರೆ…..
ಓದು ಚಿಂತನೆ ಅನ್ನುವುದು ವಿಶ್ವವ್ಯಾಪಕವಾಗಿ ಆಯಾ ಭಾಷೆಗಳಿಂದ ತುರ್ಜುಮೆಯ ರೂಪದಲ್ಲಿ ಸಿಕ್ಕುವುದು ಇಂಗ್ಲಿಷ್ ಎಂಬ ಕೊಂಡಿಯೊಂದರ ಮುಖೇನವೆಂಬುದು ಸಕಲ ಜೀವಾತ್ಮರಿಗೂ ತಿಳಿದ ಸತ್ಯ. ಹಾಗೆಂದ ಮಾತ್ರಕ್ಕೆ ಇಂಗ್ಲಿಷ ದೇವಭಾಷೆ ಏನೂ ಅಲ್ಲ. ಸಂಪರ್ಕ ಸಹಜವಾದ ಜಗತ್ತಿಗೆ ತಿಳಿದ ಏಕೈಕ ಭಾಷೆ ಇಂಗ್ಲಿಷ್ ಆದ್ದರಿಂದ ಇಂಗ್ಲಿಷ್ ಮಾಧ್ಯಮವನ್ನು ಖುದ್ದಾಗಿ ಸರಕಾರವೇ ಅಳವಡಿಸುತ್ತಿರುವಾಗ ಅದನ್ನು ವಿರೋಧಿಸುವುದು ಯಾವ ನ್ಯಾಯ…? ಜಗತ್ತಿನ ಎಲ್ಲ ಭಾಷೆಯ ಶ್ರೇಷ್ಠ ಕೃತಿಗಳು ಕನ್ನಡಕ್ಕೆ ಅನುವಾದವೋ, ಛಾಯಾನುವಾದವೋ, ರೂಪಾಂತರವೋ…. ಒಟ್ಟಿನಲ್ಲಿ ಯಾವುದೇ ರೂಪದಲ್ಲಿ ಬಂದರೂ ಅದರ ಸ್ವಾದ ಸ್ವಾರಸ್ಯವನ್ನು ಕನ್ನಡದವರೇ ಆಗಿ ಓದುವ ನಮಗೆ ಇಂಗ್ಲಿಷಿನ ಷೇಕ್ಸಪೀಯರ್ ಕನ್ನಡದಲ್ಲಿ ಶೇಷಣ್ಣನಾಗಿಬಿಡುತ್ತಾನೆ. ನಮ್ಮದೇ ಏಕಾಂತದ ಒಳಗಿನ ಮೊಳಕೆಯೊಡೆಯುವ ಹೊತ್ತು-ಅವನ ಸಾನೆಟ್, ನಾಟಕಗಳಲ್ಲಿ ಕೇಂದ್ರವಾಗಿರುತ್ತದೆ. ಆದರೆ ಕನ್ನಡದ ಅಭಿಮಾನವೆಂಬ ಸ್ವಹಿತಾಸಕ್ತಿಯ ದುರಹಂಕಾರ ಡಬ್ಬಿಂಗ್ ವಿಷಯದಲ್ಲಿ ಏಕಾಏಕಿ “ಡಬ್ಬಿಂಗ್ ಕನ್ನಡ ಭಾಷೆಗೆ ಮಾರಕ” ಎಂದು ಗುಡುಗುವ ಮಹಾಶಯರ ಘರ್ಜನೆಯು ಹೇಗೆ ಹಾಸ್ಯಾಸ್ಪದವಾಗಿ ಕಾಣುತ್ತದೆಯೋ ಹಾಗೇ ಈ ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ (6ನೇ ತರಗತಿಯಿಂದ) ಅಳವಡಿಸುವುದರ ವಿರುದ್ಧ ಗುಡುಗಿದವರ ಬಗ್ಗೆಯೂ ಅನುಮಾನ ಮೂಡುತ್ತದೆ.
ಇಂಗ್ಲಿಷ್ ಮತ್ತು ಕನ್ನಡವೆಂಬ ಓದುವ ಮಾಧ್ಯಮದ ಒಳಾಂಗಣದ ಒಳಗೇ ರಚಿತಗೊಳ್ಳುವ ಈ ಎರಡು ವರ್ಗಗಳು ಬರೀ ಕನ್ನಡ-ಇಂಗ್ಲಿಷಿನದ್ದು ಎಂದು ವರ್ಗೀಕರಿಸಿದರೆ ತಪ್ಪಾದೀತು. ಇದರಲ್ಲಿ ಮೇಲ್ವರ್ಗ ಮತ್ತು ಕೆಳವರ್ಗ(ಹಿಂದುಳಿದ) ಎಂಬುದರ ನಡುವೆ ಮಧ್ಯಮ ವರ್ಗವೆಂಬ ಮತ್ತೊಂದು ಕವಲಿದೆ. ವಲಸಿಗರು ಮತ್ತು ಶ್ರಮಿಕ ನಗರವಾಸಿ ಮಕ್ಕಳು ಇಂಗ್ಲಿಷ್ ಮಾಧ್ಯಮವೆಂದು ಪ್ರವೇಶ ಪಡೆಯುವ ಎಷ್ಟೋ ಶಾಲೆಗಳಲ್ಲಿ ಸೌಲಭ್ಯದ ಕೊರತೆಯಿಂದಾಗಿ ಅರೆಬರೆ ಶಿಕ್ಷಣ ಪಡೆಯುವ ಇವರು ಅಗಾಧವಾಗಿ ಕನ್ನಡವನ್ನು ಪ್ರೀತಿಸುತ್ತಾರೆ ಅಂತೆಯೆ ಇಂಗ್ಲಿಷನ್ನು ಮೆಚ್ಚುತ್ತಾರೆ. ಇವರಲ್ಲಿ ಭಾಷೆಯ ಹಂಬಲದ ಕನಸುಗಳು ಭರವಸೆಯ ಬದುಕನ್ನು ಚಿಗುರಿಸುತ್ತಿರುತ್ತವೆ. ಕನ್ನಡದ ನವಮಾನವ ಕಲ್ಪನೆ ರೂಪುಗೊಳ್ಳುವುದಾದರೆ ಈ ಮಕ್ಕಳು ಹರಿದಾಡುವ ಅಂಗಳದಲ್ಲೆಲ್ಲ ಕನ್ನಡದ ಕಂಪು ಸೂಸೀತು. ಇವರ ಚೈತನ್ಯವೇ ಎರಡರ ಸೇತುವೆ ಆದೀತು ಎಂಬ ಭರವಸೆಯನ್ನು ನಾವು ಇಡಬಹುದಾಗಿದೆ. ಅವಸರದಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣವನ್ನು ಜಾರಿಗೊಳಿಸಿದರೆ ಸರಕಾರಿ ಶಾಲೆಗಳ ಬೋಧನಾ ಸೌಕರ್ಯ ಹೇಗಿದೆ? ಇಂಗ್ಲಿಷ್ ಕಲಿಕೆಯನ್ನು ಸಮರ್ಥವಾಗಿ ಮಾಡಬಲ್ಲ ಶಿಕ್ಷಕರು ಎಲ್ಲಿದ್ದಾರೆ ? ಎಂಬ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಆದರೆ ಅಂತದ್ದೊಂದು ಅವಕಾಶ ಈ ಮಧ್ಯಮವರ್ಗೀಯ ಮಕ್ಕಳಿಗೆ ದಕ್ಕುತ್ತಿರುವಾಗ ಅಪ್ರಮಾಣಿಕ, ಹಣ ಮಾಡುವ ಅಡ್ಡಾದ, ಮ್ಯಾನೇಜಮೆಂಟ್ ವರ್ಚಸ್ಸಿನ ಖಾಸಗಿ ಒಡೆತನದ ಶಿಸ್ತಿನ ಶಾಲೆಗಳಿಗಿಂತ ಸರಕಾರೀ ಶಾಲೆಗಳೇ ಉತ್ತಮವಾಗಿ ಕಾರ್ಯನಿರ್ವಹಿಸುವ ಸಾಧ್ಯತೆಯನ್ನು ಈ ವರ್ಷದ ಸರಕಾರಿ ಶಾಲೆಗಳ ಫಲಿತಾಂಶ ಗಮನಿಸಿದವರು ಅಲ್ಲಗಳೆಯಲಾರರು.
ಸಮಾನಶಿಕ್ಷಣ ಎಲ್ಲ ವರ್ಗದ ಮಕ್ಕಳಿಗೂ ಸಾಮಾಜಿಕ ದೃಢತೆ ನೀಡಬಲ್ಲುದಾಗಿದೆ.

ನಮ್ಮ ಬಗ್ಗೆ

ಜಿಲ್ಲಾ ಕೇಂದ್ರದಿಂದ ನಮ್ಮ ಶಾಲೆ ೮೦ ಕಿ.ಮೀ ದೂರದಲ್ಲಿದ್ದು ಜಹಗೀರ ಗುಡದೂರ ಗ್ರಾಮ ತಾಲೂಕಿನಿಂದ ೪೦ ಕಿ.ಮೀ ಅಂತರದಲ್ಲಿದೆ. ಮಕ್ಕಳಿಗಾಗಿ ಕ್ರಿಯಾತ್ಮಕ ಚಟುವಟಿಕೆಗಳು ನಡೆಸಿ ಅವುಗಳನ್ನು ದಾಖಲಿಸುವ ಪ್ರಯತ್ನ ಎಲ್ಲ ಶಾಲೆಗಳಲ್ಲಿ ನಡೆಯುತ್ತಲಿರುತ್ತದೆ. ಆದರೆ ಮಕ್ಕಳು ತಮ್ಮ ಜೀವನದಲ್ಲಿ ಮುಂದೆ ಸಾಗಿ ತಮ್ಮ ಬರವಣಿಗೆ, ಛಾಯಾಚಿತ್ರಗಳನ್ನು ಕಂಡಾಗ ಹೊಸ ಹುರುಪಿನೊಂದಿಗೆ ಮುಂದೆ ಸಾಗಲು ಸಹಾಯಕವಾಗಬಹುದು. ನಿರಂತರ ಚಟುವಟಿಕೆಗಳು ಭವಿಷ್ಯದ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಬಹುದು. ಜೊತೆಗೆ ಶಿಕ್ಷಕರು ಸದಾ ಕಾರ್ಯನ್ಮುಕರಾಗಲು ಅನುವು ಮಾಡಿ ಕೊಟ್ಟಂತೆ ಆಗುತ್ತದೆ.

ಚಿತ್ರ

Next Newer Entries